ಬಿರಿಯಾನಿ, ಚಿಕನ್ ಫ್ರೈಗೆ ಮನವಿ ಮಾಡಿದ ಮಗು ; ಅಂಗನವಾಡಿ ಮೆನು ಪರಿಷ್ಕರಣೆಗೆ ಮುಂದಾದ ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರ!

ಕೇರಳ : ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಕೇರಳದ ಮಗುವೊಂದು ವಿನಂತಿಸುವ ವಿಡಿಯೋ ವೈರಲ್ ಆಗಿದ್ದು, ಸಿಪಿಐ(ಎಂ) ನೇತೃತ್ವದ ಕೇರಳ ಸರ್ಕಾರದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು ಪ್ರತಿಕ್ರಿಯಿಸಿದ್ದಾರೆ.ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಮಗುವಿನ ವಿಡಿಯೋ ಪೋಸ್ಟ್ ಮಾಡಿರುವ ಸಚಿವೆ ವೀಣಾ ಜಾರ್ಜ್, ವಿಡಿಯೋ ಮೂಲಕವೇ ತನ್ನ ಪ್ರತಿಕ್ರಿಯೆ ನೀಡಿದ್ದು, ಅಂಗನವಾಡಿ ಕೇಂದ್ರಗಳ ಆಹಾರದ ಮೆನು ಪರಿಷ್ಕರಿಸುವ ಬಗ್ಗೆ ಯೋಚಿಸುತ್ತೇವೆ ಎಂದಿದ್ದಾರೆ.
ಇಡುಕ್ಕಿ ಜಿಲ್ಲೆಯ ದೇವಿಕುಳಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ -1ರ ‘ಶಂಕು’ ಎಂದು ಅಕ್ಕರೆಯಿಂದ ಕರೆಯಲ್ಪಡುವ ಮಗು ಪ್ರಜುಲ್ ಎಸ್ ಸುಂದರ್ ನಿಶ್ಕಲ್ಮಶವಾಗಿ ತನ್ನ ಆಸೆಯನ್ನು ವ್ಯಕ್ತಪಡಿಸಿದೆ. ಮಗುವಿನ ತಾಯಿ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎಂದು ಸಚಿವೆ ಮಾಹಿತಿ ನೀಡಿದ್ದಾರೆ.ಶಂಕುವಿನ ಮನವಿಯನ್ನು ನಾವು ಪರಿಗಣಿಸಿದ್ದೇವೆ. ಅಂಗನವಾಡಿಗಳಲ್ಲಿ ನೀಡಲಾಗುವ ಆಹಾರದ ಮೆನು ಪರಿಷ್ಕರಿಸುವ ಬಗ್ಗೆ ನಾವು ಯೋಚಿಸುತ್ತೇವೆ. ಈಗಾಗಲೇ ಮೊಟ್ಟೆ, ಹಾಲು ನೀಡಲಾಗುತ್ತಿದೆ. ಅದರ ಜೊತೆಗೆ ಹೊಸತನ್ನು ಹೇಗೆ ಸೇರಿಸಬಹುದು ಎಂದು ನಾವು ಯೋಚನೆ ಮಾಡುತ್ತೇವೆ ಸಚಿವೆ ತಿಳಿಸಿದ್ದಾರೆ.ಪುಟ್ಟ ಮಗುವಿನ ಮನವಿಗೆ ಸಚಿವೆ ಸ್ಪಂದಿಸಿದ ರೀತಿಗೆ ಸಾಮಾಜಿಕ ಜಾತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.