ಹಣ ದುರ್ಬಳಕೆ ಆರೋಪ ಹಿನ್ನೆಲೆ : ಬಿಇಒ ಅಮಾನತು

ದೇವದುರ್ಗ : ತಾಲ್ಲೂಕಿನ ಊಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನೀಡಿದ ಸಿಎಸ್ಆರ್ ಅನುದಾನ ದುರ್ಬಳಕೆ, ಭ್ರಷ್ಟಾಚಾರ, ಕರ್ತವ್ಯ ಲೋಪ ಮತ್ತು ಸೇವಾ ನಿರ್ಲಕ್ಷ್ಯ ಮಾಡಿದ ಆರೋಪ ತನಿಖೆ ವೇಳೆ ಸಾಬೀತಾದ ಕಾರಣದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಎಚ್. ಅವರನ್ನು ಶನಿವಾರ ಅಮಾನತು ಮಾಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತೆ ಇಲಾಖೆ ಅಮಾನತು ಆದೇಶ ಹೊರಡಿಸಿದೆ. ₹30 ಲಕ್ಷ ದುರುಪಯೋಗಪಡಿಸಿಕೊಂಡ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪಟ್ಟಣದ ಕಾಂಗ್ರೆಸ್ ಮುಖಂಡ ಟಿ. ಸುರೇಶನಾಯಕ ಅವರು ದೂರು ನೀಡಿದ್ದರು.
ದೂರು ಆಧರಿಸಿ ತನಿಖೆ ಕೈಗೊಂಡು ವರದಿ ನೀಡುವಂತೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರಿಗೆ ಸೂಚಿಸಲಾಗಿತ್ತು. ಪ್ರಾಥಮಿಕ ವಿಚಾರಣೆ ವರದಿಯಲ್ಲಿ ಹಣಕಾಸು ದುರ್ಬಳಕೆ, ಭ್ರಷ್ಟಾಚಾರ, ಕರ್ತವ್ಯ ಲೋಪ ಮತ್ತು ಸೇವಾ ನಿರ್ಲಕ್ಷ್ಯ ಸಾಬೀತಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರದಿ : ವಿಶ್ವನಾಥ್ ಸಾಹುಕಾರ್ tv8newskannada ರಾಯಚೂರು