ಮಕ್ಕಳಿಲ್ಲ ಎನ್ನುವ ಕೊರಗೇ ಇವರ ಬಂಡವಾಳ; ರಾಜ್ಯದಲ್ಲಿ ಬೃಹತ್ ಮಕ್ಕಳ ಮಾರಾಟ ಜಾಲ ಪತ್ತೆ..!
ಬೆಂಗಳೂರು (ಅ. 6): ಮಕ್ಕಳಿಲ್ಲ ಎಂದು ಕಣ್ಣೀರು ಹಾಕುವ ದಂಪತಿಗಳ ಕೊರಗನ್ನೇ ಬಂಡಾವಳ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಪತ್ತೆ ಮಾಡುವಲ್ಲಿ ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ (bangalore south dcp harish pandey) ನೇತೃತ್ವದ ತಂಡ ಯಶಸ್ವಿಯಾಗಿದೆ. ಮಕ್ಕಳಿಲ್ಲ ಎಂಬ ದಂಪತಿಗಳ ಕೊರಗನ್ನು ಬಂಡಾವಳ ಮಾಡಿಕೊಂಡ ಈ ತಂಡದ ಸದಸ್ಯರು ಬಾಡಿಗೆ ತಾಯಿ ಮೂಲಕ ಮಗು ಕೊಡಿಸುವುದಾಗಿ ನಂಬಿಸುತ್ತಿದ್ದರು.
ಆದರೆ, ಬಾಡಿಗೆ ತಾಯಿ (surrogacy mother) ಬದಲು ಬಡ ಪೋಷಕರ ಮಕ್ಕಳನ್ನು ಮಾರಾಟ ಮಾಡಿ ಅದನ್ನು ನೀಡುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೇವಿ ಷಣ್ಮುಗಮ್ಮ , ಮಹೇಶ್, ರಾಜಣ್ಣ, ಜನಾರ್ಧನ್ ಮತ್ತು ಧನಲಕ್ಷ್ಮೀ ಬಂಧಿತ ಆರೋಪಿಗಳು.
ಮಕ್ಕಳಿಲ್ಲ ಎಂಬ ನೋವೇ ಇವರಿಗೆ ಹಣದ ಮಾರ್ಗ
ಮಕ್ಕಳಿಲ್ಲದ ಅನೇಕ ದಂಪತಿಗಳು ಬಾಡಿಗೆ ತಾಯಿತನ ಮೂಲಕ ಮಗುವನ್ನು ಪಡೆಯುವ ಕನಸು ಕಾಣುತ್ತಿರುತ್ತಾರೆ. ಅಂತಹ ಪೋಷಕರ ಕೊರಗನ್ನು ಉಪಯೋಗಿಸಿಕೊಳ್ಳುವ ಈ ಗ್ಯಾಂಗ್ ಸದಸ್ಯರು ಬಾಡಿಗೆ ತಾಯಿ ಮೂಲಕ ನಾವು ಮಗುವನ್ನು ಕೊಡಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಈ ವೇಳೆ ಬಾಡಿಗೆ ತಾಯಿ ವಿವರಣೆ ನೀಡುವುದಿಲ್ಲ. ಹೆರಿಗೆಯಾದ ಮೇಲೆ ಮಗುವನ್ನು ಕರೆದುಕೊಂಡು ಬರುತ್ತೇವೆ ಎಂದು ನಂಬಿಸುತ್ತಾರೆ. ಇವರ ಮಾತಿನ ಮೇಲೆ ಭರವಸೆ ಇಟ್ಟು ಪೋಷಕರು ಲಕ್ಷ ಲಕ್ಷ ಹಣ ನೀಡುತ್ತಾರೆ.