ಅಯ್ಯಪ್ಪಸ್ವಾಮಿ ಮಾಲಾದರಿ ಯವರಿಂದ ಭಾವಚಿತ್ರದ ಭವ್ಯ ಮೆರವಣಿಗೆ

ಲಿಂಗಸುಗೂರು: ಸ್ಥಳೀಯ ಅಯ್ಯಪ್ಪಸ್ವಾಮಿ ದೇವಸ್ಥಾನದ 8ನೇ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ನಿಮಿತ್ತ ಸೋಮವಾರ ಮಾಲಾಧಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮತ್ತು ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿದರು.
ಸುಪ್ರಭಾತದೊಂದಿಗೆ ಆರಂಭಗೊಂಡ ಪೂಜಾ ಕೈಂಕರ್ಯಗಳು ನೈರ್ಮಲ್ಯ ದರ್ಶನಂ, ಮಹಾಗಣಪತಿ ಹೋಮ, ಅಯ್ಯಪ್ಪಸ್ವಾಮಿ ಮೂರ್ತಿ ಸೇರಿದಂತೆ ದೇವಸ್ಥಾನದ ಉಪ ದೇವತೆಗಳ ಕಳಸಾಭಿಷೇಕಂ ನೆರವೇರಿಸಿದ ನಂತರದಲ್ಲಿ ಈಶ್ವರ ದೇವಸ್ಥಾನದಲ್ಲಿ ತೆರೆದ ಅಲಂಕೃತ ವಾಹನದಲ್ಲಿ ಭಾವಚಿತ್ರ ಪ್ರತಿಷ್ಠಾಪಿಸಿ, ಉತ್ಸವ ಮೂರ್ತಿಯೊಂದಿಗೆ ಕರ್ಪೂರದಾರತಿ ಬೆಳಗುತ್ತ ಮೆರವಣಿಗೆಗೆ ಚಾಲನೆ ನೀಡಲಾಯಿತು,
ಈಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಹಳೆ ಬಸ್ ನಿಲ್ದಾಣ, ಹಳೆ ವಿಜಯಬ್ಯಾಂಕ್ ರಸ್ತೆ, ಗಡಿಯಾರ ವೃತ್ತ, ಅಂಚೆ ಕಚೇರಿ, ಬಸ್ ನಿಲ್ದಾಣ ಮಾರ್ಗವಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಸಾಗಿ ಬಂದಿತು. ನಂತರದಲ್ಲಿ ಅನ್ನಸಂತರ್ಪಣೆ ನೆರವೇರಿಸಿದರು. ಸಂಜೆ ದೀಪಾರಾಧನೆ, ಅಯ್ಯಪ್ಪಸ್ವಾಮಿ ಪಡಿ ಪೂಜೆ, ಹತ್ತಾಯ, ಪುಷ್ಪಾಭಿಷೇಕ, ಪಾನಕ ನೈವೇದ್ಯ ಅರ್ಪಿಸಿ ಹರಿವರಾಸನಂ ಮೂಲಕ ಪೂಜೆಗಳಿಗೆ ವಿದಾಯ ಹೇಳಲಾಯಿತು.ಕೇರಳ ಮೂಲದ ಪ್ರಶಾಂತ ನಂಬೋದರಿ ನೇತೃತ್ವದಲ್ಲಿ ಗುರುಸ್ವಾಮಿಗಳಾದ ಸಿದ್ರಾಮಪ್ಪ ನಗರಗುಂಡ, ಈರಣ್ಣ, ಮಂಜುನಾಥ ಗುರುಸ್ವಾಮಿ ಸಹಯೋಗದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಅಯ್ಯಪ್ಪಸ್ವಾಮಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮನೋಹರರೆಡ್ಡಿ ಮುನ್ನೂರು, ಉಪಾಧ್ಯಕ್ಷ ಬಸವರಾಜಗೌಡ ಗಣೆಕಲ್, ಮುಖಂಡರಾದ ಶ್ರೀನಿವಾಸರೆಡ್ಡಿ, ಬಸವರಾಜ ಮುನ್ನೂರು, ಮಾರೆಪ್ಪ ನಾಯಕ, ಮಂಜುನಾಥ ಕುಪ್ಪಿಗುಡ್ಡ, ರಾಜೇಶ ಮಾಣಿಕ್ ಭಾಗವಹಿಸಿದ್ದರು.
ವರದಿ : ಮುಸ್ತಾಫಾ tv8newskannada ಲಿಂಗಸುಗೂರು