ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಲು ಕರೆ : ಸಿ.ಇ.ಓ ಮೋನಾ ರೋತ್

ಚಾಮರಾಜನಗರ : ಮುಂದಿನ ಪೀಳಿಗೆಗೆ ಸಿರಿಧಾನ್ಯ ಬಳಕೆ ಕುರಿತು ಅರಿವು ಮೂಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಮೊನಾ ರೋತ್ ತಿಳಿಸಿದರು.
ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕದ ಸ್ಪರ್ಧೆಯನ್ನು ನವಣೆ ಹಾಗೂ ರಾಗಿ ಬೀಸುವ ಮೂಲಕ ಉದ್ಘಾಟನೆ ನೆರವೇರಿಸಿ ನಂತರ ಮಾತನಾಡಿದ ಅವರು, ಸಿರಿಧಾನ್ಯಗಳ ಬಳಕೆಯಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇತರೆ ಸಾಮಾನ್ಯ ಕಾಯಿಲೆಗಳಿಂದ ದೂರ ಇರಬಹುದು, ಆದ್ದರಿಂದ ಮುಂದಿನ ತಲೆಮಾರಿನ ಮಕ್ಕಳು ಮತ್ತು ಮೊಮ್ಮಕ್ಕಳು ಬಳಸುವ ಕುರಿತು ಅರಿವು ಮೂಡಿಸಿ ಅವರನ್ನು ಸದೃಢಗೊಳಿಸಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ್ದ ತಿಂಡಿ ತಿನಿಸುಗಳನ್ನು ಸೇವಿಸಿದರು.
ಉಪ ಕೃಷಿ ನಿರ್ದೇಶಕಿ ಸುಷ್ಮಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ ಅದನ್ನು ಉತ್ತೇಜಿಸುವ ಸಲುವಾಗಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮಹಿಳೆಯರಿಗೆ ಸಿರಿಧಾನ್ಯಗಳ ಸ್ಪರ್ಧೆ ಆಯೋಜಿಸಿದ್ದು, 60 ಮಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ 9 ಮಂದಿ ಮಹಿಳೆಯರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಿ , ಜಂಟಿ ಕೃಷಿ ನಿರ್ದೇಶಕ ಅಬೀದ್, ಸಹಾಯಕ ಕೃಷಿ ನಿರ್ದೇಶಕರಾದ ಲೀಲಾವತಿ, ರೂಪ, ನಿಶಾಂತ್, ಅಮೃತೇಶ್, ಶಶಿಧರ್ ಮೂರ್ತಿ ಹಾಗೂ ತೀರ್ಪುಗಾರರಾದ ಡಾ.ಜೆ. ದೀಪ , ಡಾ. ಮಮತಾ, ಡಾ.ಧನ್ಯಶ್ರೀ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8newskannada, ಚಾಮರಾಜನಗರ