ಬೃಹತ್ ಜನಜಾಗೃತಿ ಸಮಾವೇಶ ಪ್ರಚಾರ ರಥಕ್ಕೆ ಚಾಲನೆ

ನ.30 ರಂದು ನಂಜನಗೂಡಿನಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಬೃಹತ್ ಜನಜಾಗೃತಿ ಸಮಾವೇಶ; ಪ್ರಚಾರ ರಥಕ್ಕೆ ಚಾಲನೆ
ನಂಜನಗೂಡು : ಸಂವಿಧಾನ ಸಮರ್ಪಣ ದಿನದ ಪ್ರಯುಕ್ತ ನಂಜನಗೂಡು ನಗರದ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ನಂತರ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ನ.30 ರಂದು ನಂಜನಗೂಡಿನಲ್ಲಿ ನಡೆಯುವ ಜನಜಾಗೃತಿ ಸಮಾವೇಶದ ಪ್ರಚಾರ ರಥಕ್ಕೆ ನಂಜನಗೂಡು ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ನೀಲಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಮಂಜು ಶಂಕರಪುರ ಮಾತನಾಡಿ, ಜನರಿಗೆ ಸಂವಿಧಾನದ ಬಗ್ಗೆ ತಿಳಿಸುವ ಸಲುವಾಗಿ ಈ ಬಾರಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ನ.30 ರಂದು ಶನಿವಾರ ನಂಜನಗೂಡಿನ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮರ್ಪಣ ದಿನದ ಅಂಗವಾಗಿ ಬೃಹತ್ ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಉಪಸ್ಥಿತಿಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ಸಂಸದರಾದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮುಖ್ಯ ಭಾಷಣಕಾರರಾಗಿ ಡಾ.ವಿಠ್ಠಲ ವಗ್ಗನ್, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಬಿ.ಹರ್ಷವರ್ಧನ್ , ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪ್ರಚಾರ ರಥವು ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದ್ದು ತಾಲ್ಲೂಕಿನ ಎಲ್ಲಾ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಅಧ್ಯಕ್ಷ ಮಂಜು ಶಂಕರಪುರ, ಗೌರವಾಧ್ಯಕ್ಷ ಗೀಕಹಳ್ಳಿ ಮಹದೇವಸ್ವಾಮಿ, ಉಪಾಧ್ಯಕ್ಷ ಎಂ. ರಾಜಶೇಖರ್, ಕಾರ್ಯಾಧ್ಯಕ್ಷ ಬಸವಟ್ಟಿಗೆ ನಾಗೇಂದ್ರ , ಪ್ರಧಾನ ಕಾರ್ಯದರ್ಶಿ ಅಲತ್ತೂರು ಶಿವರಾಜು, ಮಾಧ್ಯಮ ಕಾರ್ಯದರ್ಶಿ ಜೆ. ಮಹದೇವಕುಮಾರ್, ಹಿರಿಯ ಸಲಹೆಗಾರರಾದ ದೇವರಸನಹಳ್ಳಿ ಮಹದೇವಸ್ವಾಮಿ, ಬೊಕ್ಕಹಳ್ಳಿ ಲಿಂಗಯ್ಯ, ಮೂಡಹಳ್ಳಿ ಮಹದೇವ್, ಸಹ ಕಾರ್ಯದರ್ಶಿ ಸಿದ್ದರಾಜು, ಕಾರ್ಮಿಕ ಕಾರ್ಯದರ್ಶಿ ಪ್ರಭುಸ್ವಾಮಿ, ಸಂಘಟನಾ ಕಾರ್ಯದರ್ಶಿ ಹರದನಹಳ್ಳಿ ರಾಜೇಶ್, ಸದಸ್ಯರಾದ ಶಿವಮೂರ್ತಿ, ಗಟ್ಟವಾಡಿ ಮಹೇಶ್, ಮಹದೇವಸ್ವಾಮಿ, ಮುಳ್ಳೂರು ಸ್ವಾಮಿ, ಕಳಲೆ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.