ಅಪ್ಪ ನಾನು ಸಾಯ್ತಾ ಇದ್ದೇನೆ..!
ಆನೇಕಲ್ : ಆ ಕಾರು (Car) ನಿನ್ನೆ ಸಂಜೆಯಿಂದ ಅಲ್ಲಿಯೇ ನಿಂತಿತ್ತು. ಸ್ಥಳೀಯರು ಸಹ ಯಾರೋ ನಿಲ್ಲಿಸಿದ್ದಾರೆ ಎಂದು ಸುಮ್ಮನಾಗಿದ್ದರು. ಇಂದು ಸಂಜೆ ಪೊಲೀಸರು (Police) ಸ್ಥಳಕ್ಕೆ ಬಂದಾಗ ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿತ್ತು. ಯಾವುದೋ ಕಾರಣಕ್ಕೆ ಆತ್ಮಹತ್ಯೆ (Suicide) ಎಂದು ಭಾವಿಸಲಾಗಿತ್ತು. ಆದ್ರೆ ಮೃತ ವ್ಯಕ್ತಿಯ ಮೊಬೈಲ್ ಪರಿಶೀಲನೆ ನಡೆಸಿದಾಗ ಆತನ ಸಾವಿಗೆ ಸ್ಪೋಟಕ ತಿರುವು ಸಿಕ್ಕಿದೆ. ಸ್ವಂತ ತಂದೆಯ ಕಿರುಕುಳ ಮತ್ತು ಸಾಲಬಾಧೆ ತಾಳಲಾರದೇ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿರುವುದಾಗಿ ಮೃತ ವ್ಯಕ್ತಿ ವಿಡಿಯೋ (video) ಮಾಡಿ ಸಾವಿಗೆ ಶರಣಾಗಿದ್ದಾನೆ.
ಮೃತನ ಹೆಸರು ಪಾರ್ಥಸಾರಥಿ. ವಯಸ್ಸು ನಲವತ್ತೈದರ ಅಸುಪಾಸು. ಬೆಂಗಳೂರಿನ ಡೈರಿ ಸರ್ಕಲ್ ನಿವಾಸಿಯಾದ ಈತ, ಇಂದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ನಜಾಂಪುರ ಸಮೀಪದ ರಸ್ತೆ ಬದಿಯಲ್ಲಿ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ತನ್ನ ಸಾವಿಗೆ ಕಾರಣವನ್ನು ವಿಡಿಯೋ ಮೂಲಕ ರೆಕಾರ್ಡ್ ಮಾಡಿ ತನ್ನ ಆತ್ಮೀಯರಿಗೆ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುಮಾರು ಎಂಟು ನಿಮಿಷಗಳ ವಿಡಿಯೋದಲ್ಲಿ ತಂದೆ ಉದಯ್ ಕುಮಾರ್ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಸಾಲ ಬಾಧೆ ಬಗ್ಗೆ ವಿವರಿಸಿದ್ದಾನೆ.
ಜೀವನದಲ್ಲಿ ತಂದೆಯಾಗಿ ನೀನು ನನಗೆ ಏನೂ ನೀಡಿದ್ದಿಯಾ ಗೊತ್ತಿಲ್ಲ..? ಆದರೆ ಮಗನಾಗಿ ನಾನು ನಿನಗೆ ಇನ್ನು ಮುಂದೆ ತೊಂದರೆ ಕೊಡುವುದಿಲ್ಲ. ನನ್ನ ಸಾವಿನ ಬಳಿಕ ನನ್ನ ಹೆಂಡತಿ ಮಕ್ಕಳನ್ನು ಅನಾದಿಯಾಗಿ ಬಿಡಬೇಡ. ನನ್ನ ನಂಬಿ ಜೊತೆಯಾಗಿ ಬಂದಂತಹ ಹೆಂಡತಿ ಜೊತೆ ಬದಕಲು ಸಾಧ್ಯವಾಗುತ್ತಿಲ್ಲ. ಕೊನೆಯದಾಗಿ ನಿನ್ನ ಬಳಿ ನನ್ನ ಮನವಿ ಮಾಡುತ್ತೆನೆ. ನನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಡದೆ ನೋಡಿಕೊಳ್ಳುವಂತೆ ತಂದೆಗೆ ಮನವಿ ಮಾಡುವ ಮೃತ ಪಾರ್ಥಸಾರಥಿ ನಿನ್ನ ತಪ್ಪುಗಳನ್ನು ಮರೆಮಾಚಲು ನನ್ನ ಹೆಂಡತಿ ಮೇಲೆ ಸಾವಿರಾರು ಹೇಳಿರುವೆ ಎಂದು ತಂದೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾನೆ.
ಜೊತೆಗೆ ಸಾಲ ತಲೆ ಮೇಲೆ ಹೊರಿಸಿ ಬರಿಗೈಯಲ್ಲಿ ಹೊರ ಕಳಿಸಿದೆ. ಅದೇ ಸಮಯಕ್ಕೆ ಕೊರೊನಾದಿಂದ ವ್ಯಪಾರ ಇಲ್ಲದೆ ನಷ್ಟವಾಯಿತು. ಹಾಗಾಗಿ ಇವತ್ತು ಎತ್ತ ನೋಡಿದರೂ ಸಮಸ್ಯೆಗಳೇ ಕಾಣುತ್ತಿದೆ. ಮಕ್ಕಳಿಗಾಗಿ ಇಲ್ಲಿಯವರೆಗೆ ಬದುಕಿದೆ. ಆದರೆ ಜೀವನದಲ್ಲಿ ಅಂದುಕೊಂಡಂತೆ ಯಾವುದು ನಡೆಯಲಿಲ್ಲ. ಚಿಕ್ಕಂದಿನಿಂದಲೂ ನನ್ನನ್ನು ಬದುಕುಲು ಬಿಡಲಿಲ್ಲ. ಇವತ್ತು ನಾನು ಸಾಯುವ ಸ್ಥಿತಿಗೆ ಬಂದಿದ್ದೆನೆ. ದಯವಿಟ್ಟು ನನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡ. ಮನೆಯನ್ನು ಮಾರಿ ಲೀಜ್ ದಾರರಿಗೆ ಹಣ ಹಿಂತಿರುಗಿಸು. ಉಳಿದ ಹಣವನ್ನು ಬ್ಯಾಂಕ್ ಸಾಲ ತಿರಿಸುವಂತೆ ತಂದೆಗೆ ಹೇಳುವ ಪಾರ್ಥಸಾರಥಿ ನನ್ನ ನಂಬಿ ಕೆಲವರು ಮೆಟೀರಿಯಲ್ಸ್ ನೀಡಿದ್ದಾರೆ. ಅವರಿಗೆ ಸಾಲವನ್ನು ಹಿಂತಿರಿಗಿಸಿ ಪುಣ್ಯ ಕಟ್ಟಿಕೊ ಎಂದು ಮನವಿ ಮಾಡಿದ್ದಾನೆ.
ಪತ್ನಿ ಬಳಿ ಕ್ಷಮೆ ಕೇಳಿರುವ ಪತಿ
ಇನ್ನೂ ನಿಮ್ಮಿಂದ ಎಷ್ಟೋ ಕನಸುಗಳು ಮಣ್ಣು ಪಾಲಾದವು. ಆತ್ಮಹತ್ಯೆ ಮಾಡಿಕೊಳ್ಳಲು ನಾಚಿಕೆಯಾಗುತ್ತದೆ. ಆದ್ರೆ ಬೇರೆ ದಾರಿಯಿಲ್ಲ. ನಿನ್ನ ಮಗನಾಗಿ ಹುಟ್ಟಿ ನಾನು ನಾಶವಾದೇ. ಅಹಂಕಾರ ಎಂಬುದನ್ನು ನಿನ್ನ ನೋಡಿ ಕಲಿಯಬೇಕು. ನಿನ್ನ ಮುಂದೆ ನಾನು ಸಂಪೂರ್ಣ ಸೋತು ಹೋದೆ. ಇವತ್ತು ನಾನು ಸಾಲಗಾರನಾಗಿರಲು ಕಾರಣ ನೀನು. ನಾನು ಮತ್ತು ಹೆಂಡತಿ ಮಕ್ಕಳು ನಾಲ್ಕು ಮಂದಿ ಸಾಯಬೇಕೆಂದಿದ್ದೆ. ಆದ್ರೆ ಮುದ್ದಾದ ಮಕ್ಕಳ ಮುಖ ನೋಡಿ ಸುಮ್ಮನಾದೆ. ಇಡೀ ನಿನ್ನ ವಂಶವೇ ಉಳಿಯಬಾರದು ಎಂದಿದ್ದೆ ಎಂದು ತಂದೆ ಉದಯ್ ಕುಮಾರ್ಗೆ ಸಾವಿನ ಕೊನೆ ಗಳಿಗೆಯಲ್ಲಿ ವಿಡಿಯೋ ಮೂಲಕ ತನ್ನ ನೋವನ್ನು ತೊಡಗಿಕೊಂಡಿದ್ದಾನೆ. ಜೊತೆಗೆ ನಡು ದಾರಿಯಲ್ಲಿ ಬಿಟ್ಟು ಹೋಗುತ್ತಿರುವುದಕ್ಕೆ ಪತ್ನಿ ಬಳಿ ಮೃತ ಪಾರ್ಥಸಾರಥಿ ಆತ್ಮಹತ್ಯೆಗೂ ಮೊದಲು ಕ್ಷಮೆ ಕೋರಿದ್ದಾನೆ.
ಬ್ಯಾಂಕ್ ಸಿಬ್ಬಂದಿಯಿಂದಲೂ ಕಿರುಕುಳ
ಇನ್ನೂ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಉದ್ಯಮಿ ಪಾರ್ಥಸಾರಥಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕುಟುಂಬದವರು ಆರೋಪಿಸಿದ್ದಾರೆ. ಕೋಟಕ್ ಮಹೇಂದ್ರ ಮತ್ತು ಬಜಾಜ್ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಬ್ಯಾಂಕ್ ಸಿಬ್ಬಂದಿ ಮನೆ ಬಳಿ ಬಂದು ನೋಟೀಸ್ ನೀಡಿ ಹಣ ಕಟ್ಟುವಂತೆ ಗಲಾಟೆ ನಡೆಸಿದ್ದರು. ಕೊರೊನಾ ದಿಂದಾಗಿ ಎರಡು ಮೂರು ಕಂತು ಕಟ್ಟಿರಲಿಲ್ಲ. ವಾಟರ್ ಫಿಲ್ಟರ್ ಪ್ಲಾಂಟ್ಗಳನ್ನು ಇನ್ಸ್ಟಾಲ್ ಮಾಡುವುದು ಮತ್ತು ಅಗತ್ಯ ಸಾಮಗ್ರಿಗಳನ್ನು ಹೊರ ರಾಜ್ಯಗಳಿಂದ ತರಿಸಿ ಗ್ರಾಹಕರಿಗೆ ವಿತರಿಸಲಾಗುತ್ತಿತ್ತು.