ಇತ್ತೀಚಿನ ಸುದ್ದಿ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿ ಕೊಳಬಾಳ ಗ್ರಾಪಂ ಪಿಡಿಒ ಮಲ್ಲಯ್ಯ ಸಲಹೆ / ದುಡಿಯೋಣ ಬಾ ಅಭಿಯಾನ

ಮಸ್ಕಿ : ತಾಲೂಕಿನ ಕೊಳಬಾಳ ಗ್ರಾಮ ಪಂಚಾಯತಿಯ ಹಂಚಿನಾಳ (ಯು) ಕ್ಯಾಂಪ್ ಹತ್ತಿರದ ತುಂಗಭದ್ರಾ ಎಡದಂಡೆ ನಾಲೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ಉದ್ಯೋಗ ಖಾತ್ರಿ ಯೋಜನೆಯ ದುಡಿಯೋಣ ಬಾ ಅಭಿಯಾನ ಜರುಗಿತು.

ಕೊಳಬಾಳ ಗ್ರಾ.ಪಂ.
ಅಭಿವೃದ್ಧಿ ಅಧಿಕಾರಿ ಮಲ್ಲಯ್ಯ ಮಾತನಾಡಿ, ಗುಳೆ ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೊಳಿಸಿದ್ದು, ಪ್ರತಿಯೊಬ್ಬರು ಕೆಲಸದಲ್ಲಿ ತೊಡಗಿ, ಆರ್ಥಿಕವಾಗಿ ಸದೃಢರಾಗಬೇಕು. ಏಪ್ರಿಲ್ 1 ರಿಂದ 349 ರೂ. ಇದ್ದ ಕೂಲಿ ಮೊತ್ತ 370 ರೂ.ಗೆ ಹೆಚ್ಚಳವಾಗಿದೆ. ಕಾಲುವೆಗಳಲ್ಲಿ ಹೂಳು ಎತ್ತುವುದರಿಂದ ನೀರು ಸರಾಗವಾಗಿ ಹರಿದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ತಾಂತ್ರಿಕ ಸಹಾಯಕ ಅಭಿಯಂತರರು ನೀಡಿದ ಅಳತೆ ಪ್ರಕಾರ ಕೆಲಸ ನಿರ್ವಹಿಸಿದರೆ, ಕೂಲಿ ಪಾವತಿಗೆ ಅನುಕೂಲವಾಗಲಿದೆ.

ಈಗಾಗಲೇ ಸರ್ಕಾರ ಕೆಲಸದ ಪ್ರಮಾಣದಲ್ಲಿ ಹಿರಿಯ ನಾಗರಿಕರು, ಗರ್ಭಿಣಿಯರು, ವಿಶೇಷ ಚೇತನರಿಗೆ ರಿಯಾಯಿತಿ ನೀಡಿದೆ. ತಾಯಂದಿರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೂಸಿನ ಮನೆ ಆರಂಭಿಸಿದ್ದು, ಮೂರು ವರ್ಷದೊಳಗಿನ ಮಕ್ಕಳನ್ನು ಕೆಲಸದ ಸ್ಥಳಕ್ಕೆ ಕರೆ ತರದೇ ಕೂಸಿನ ಮನೆಯಲ್ಲಿ ಬಿಟ್ಟು ಬರಬೇಕು. ಅವರ ಲಾಲನೆ ಪಾಲನೆಗಾಗಿ ಆರೈಕೆದಾರರಿಗೆ ತರಬೇತಿ ನೀಡಿ, ಅಗತ್ಯ ಮೂಲ ಸೌಕರ್ಯ ಜೊತೆಗೆ ಆಟಿಕೆ ಸಾಮಗ್ರಿ , ಊಟದ ವ್ಯವಸ್ಥೆ ಮಾಡಲಾಗಿದೆ. ಸಾಮಗ್ರಿ ಆಧಾರಿತ ಕಾಮಗಾರಿಗಳಲ್ಲಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ, ಕಂಪೌಂಡ್, ಅಡುಗೆ ಕೋಣೆ, ಭೋಜನಾಲಯ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಈ ವೇಳೆ ತಾಪಂ ಐಇಸಿ ಸಂಯೋಜಕ ಸತೀಶ್, ಅನಂತ್, ರಮೇಶ್, ಮೇಟಿಗಳು, ಗ್ರಾಪಂ ಸಿಬ್ಬಂದಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button