ಸೈಲೆಂಟ್ ಆಗಿಯೇ ಕಾಡುವ `ಮಾದೇವ’ : ಮೆಚ್ಚಬೇಕು ನಿರ್ದೇಶಕನ ಧೈರ್ಯವ..!

ಮಾದೇವ ಸಿನಿಮಾದ ಬಗ್ಗೆ ಇದ್ದ ಕುತೂಹಲಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಸಿನಿ ಪ್ರೇಮಿಗಳು ಮಾದೇವನನ್ನು ನೋಡಿ, ಮನಸ್ಸನ್ನ ಭಾರ ಮಾಡಿಕೊಂಡು, ಮಾತಾಡಿದ್ರೆ ಸಾಕು ಕಣ್ಣೀರು ಬರುವಷ್ಟು ಆಳದಲ್ಲಿ ಮಾದೇವನ ದರ್ಶನ ಮಾಡಿಕೊಂಡು ಬಂದಿದ್ದಾರೆ. ಪ್ರೀತಿ ಏನನ್ನ ಬೇಕಾದರೂ, ಯಾರನ್ನ ಬೇಕಾದರೂ ಬದಲಿಸುತ್ತದೆ.
ಅದು ಮಾದೇವನಲ್ಲಿಯೂ ಪ್ರೂವ್ ಆಗಿದೆ.
ಮಾದೇವ ಜೈಲಿನಲ್ಲಿ ಹ್ಯಾಂಗರ್ ಮ್ಯಾನ್ ಆಗಿ ಕೆಲಸ ಮಾಡ್ತಾ ಇರ್ತಾನೆ. ಅದೇ ಕಾರಣಕ್ಕೆ ಮನುಷ್ಯತ್ವವನ್ನೇ ಮರೆತವನಂತೆ, ಭಾವನೆಗಳೇ ಇಲ್ಲದಂತೆ ಬದುಕು ನಡೆಸುತ್ತಾ ಇರುತ್ತಾನೆ. ಮಾದೇವನ ಬಾಳಲ್ಲಿ ಪಾರ್ವತಿಯ ಎಂಟ್ರಿಯಾದ ಮೇಲೆ ಮಾದೇವನ ಮನಸ್ಸೊಳಗೆ ಪ್ರೀತಿ ಭಾವನೆ ಚಿಗುರೊಡೆಯೋಕೆ ಶುರುವಾಗುತ್ತದೆ. ಆದರೆ ವಿಧಿಯಾಟದಿಂದ ಮಾದೇವ ಮತ್ತೆ ರಾಕ್ಷಸನಾಗಿ ಬದಲಾಗುತ್ತಾನೆ. ಆ ಸನ್ನಿವೇಶವನ್ನ ತೆರೆ ಮೇಲೆ ನೋಡಿದರೇನೆ ಚೆಂದ. ಇಂಥ ಕಥೆಯನ್ನ ನಾಯಕರು ಒಪ್ಪುವುದೇ ಕಷ್ಟ. ಆದರೆ ವಿನೋದ್ ಪ್ರಭಾಕರ್ ರಿಸ್ಕ್ ತೆಗೆದುಕೊಂಡು ಮಾಡಿದ್ದಾರೆ. ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದು ಕಡೆ ವಿನೋದ್ ಪ್ರಭಾಕರ್ ಅವರ ಧೈರ್ಯ ಮೆಚ್ಚಬೇಕಾಗಿದ್ದರೆ, ಮತ್ತೊಂದು ಕಡೆ ನಿರ್ದೇಶಕ ನವೀನ್ ರೆಡ್ಡಿ ಅವರ ಧೈರ್ಯವೂ ಗ್ರೇಟ್ ಅನ್ನಿಸುತ್ತದೆ. ಈಗಿನ ಕಾಲಕ್ಕೆ ಮೌನದಲ್ಲಿಯೇ ಎಲ್ಲರನ್ನು ಥಿಯೇಟರ್ ನಲ್ಲಿ ಕೂರಿಸುವುದು ಅಂದ್ರೆ ಸುಲಭದ ಮಾತಲ್ಲ. ಮಾದೇವನತ್ತ ಚಾಲೆಂಜಿಂಗ್ ಕಥೆಯನ್ನ ತೆಗೆದುಕೊಂಡು ನವೀನ್ ರೆಡ್ಡಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಉಳಿದಂತೆ ಸೋನಲ್ ಚೆಂದದ ಪಾತ್ರವನ್ನ ನಿಭಾಯಿಸಿದ್ದಾರೆ. ಶ್ರೀನಗರ ಕಿಟ್ಟಿ ವಿಲನ್ ಆಗಿ ಅಬ್ಬಿರಿಸಿದ್ರೆ, ಶೃತಿ ಕೂಡ ಖಳನಟಿಯಾಗಿ ಗಮನ ಸೆಳೆದಿದ್ದಾರೆ. ಮಾಲಾಶ್ರೀ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವೀನ್ ರೆಡ್ಡಿ ನಿರ್ದೇಶನ ಮಾಡಿದ ಈ ಸಿನಿಮಾವನ್ನು ಆರ್.ಕೇಶವ ದೇವಸಂದ್ರ ನಿರ್ಮಾಣ ಮಾಡಿದೆ.
ವರದಿ : ಮೊಹಮ್ಮದ್ ಶಫಿ ಫಿಲಂ ಬ್ಯೂರೋ tv8kannada ಬೆಂಗಳೂರು