ಕೋಲಾರ: ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಟೊಮೆಟೊ ಮಾರುಕಟ್ಟೆ (Tomato Market) ಎಂಬ ಹೆಗ್ಗಳಿಕೆ ಪಡೆದಿರುವ ಕೋಲಾರ (Kolar) ಎಪಿಎಂಸಿ (APMC) ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಬೆಲೆ 1 ಸಾವಿರ ಗಡಿದಾಟಿದೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 15 ಕೆಜಿ ತೂಕದ ಬಾಕ್ಸ್, 1 ಸಾವಿರ ರೂಪಾಯಿ ಗಡಿದಾಟಿದ್ದು, ಟೊಮೆಟೊ ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ.
ಆದರೆ ಈ ಸಂತಸ ಕೋಲಾರ ರೈತರ (Kolar Farmers) ಪಾಲಿಗೆ ಇಲ್ಲದಂತಾಗಿದೆ. ಕೋಲಾರ ಜಿಲ್ಲೆಯಲ್ಲೀಗ ಟೊಮೆಟೊ ಬೆಳೆಯೇ ಇಲ್ಲ, ನೆರೆಯ ಆಂದ್ರದಿಂದ ಶೇಕಡಾ 70 ರಷ್ಟು ಟೊಮೆಟೊ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಕೋಲಾರದ ಮಾರುಕಟ್ಟೆಯಲ್ಲಿ ಆಂಧ್ರದ ರೈತರಿಗೆ (Andhra Pradesh) ಭರ್ಜರಿ ಬೆಲೆ ಸಿಕ್ಕಿ ಲಾಟರಿ ಹೊಡೆದಂತಾಗಿದೆ. ಕಳೆದ ಒಂದೂವರೆ ವರ್ಷದಿಂದ ಸಾಲು ಸಾಲು ನಷ್ಟ ಅನುಭವಿಸಿರೊ ಕೋಲಾರದ ರೈತರು, ಈ ಸಲ ಟೊಮೆಟೊ ಬೆಳೆಯೋ ಸಾಹಸಕ್ಕೆ ಕೈ ಹಾಕಿಲ್ಲ, ದೇಶಾದ್ಯಂತ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು ಸಹಜವಾಗಿಯೇ ಎಲ್ಲೆಡೆ ಬೆಲೆ ಏರಿಕೆಯಾಗಿದೆ.
ಟೊಮೆಟೊ ಗುಣಟಮಟ್ಟ ಇಳಿಕೆ
ಇನ್ನು ಕೋಲಾರದ ಕೆಲ ಕಡೆ ಟೊಮೆಟೊಗೆ ಕೀಟ ಭಾದೆ ಕಾಡುತ್ತಿದ್ದು, ಅದರಿಂದ ಟೊಮೆಟೊ ಗುಣಮಟ್ಟ ಇಳಿಕೆಯಾಗಿ, ಹೊರ ರಾಜ್ಯಗಳಿಗೆ ಟೊಮೆಟೊ ರಪ್ತು ಮಾಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಟೊಮೆಟೊ ಸೇರಿದಂತೆ ಕೆಲ ತರಕಾರಿಗಳಿಗೂ ಹೊರ ರಾಜ್ಯದಲ್ಲಿ ಬೇಡಿಕೆ ಇಳಿಕೆಯಾಗಿದ್ದು, ಈ ಬಗ್ಗೆ ಮಾತನಾಡಿರುವ ಕೋಲಾರ ಜೆಡಿಎಸ್ ಎಮ್ಎಲ್ಸಿ ಗೋವಿಂದರಾಜು(MLC Govindaraju), ಬೆಂಗಳೂರಿನ ಕೊಳಚೆ ನೀರನ್ನ ಮೂರನೇ ಬಾರಿಗೆ ಸಂಸ್ಕರಿಸದೆ.
ಹರಿಸುತ್ತಿರುವುದೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ, ಕೆಸಿ ವ್ಯಾಲಿ ನೀರು (KC Valley Project)ಕೃಷಿ ಬಳಕೆಗೆ ಜಿಲ್ಲಾಡಳಿತ ನಿಷೇಧ ಹೇರಿದ್ದರು, ಹಳ್ಳಿಗಳಲ್ಲಿ ಕೆಲ ರೈತರು ನೇರವಾಗಿ ಕೆಸಿ ವ್ಯಾಲಿ ನೀರನ್ನ ಕೃಷಿಗೆ ಬಳಸುತ್ತಿರುವುದು ರೋಗಬಾದೆಗೆ ಕಾರಣವೆಂಬ ಅನುಮಾನ ವ್ಯಕ್ತವಾಗಿದೆ, ಇದರ ಜೊತೆಗೆ ಕೆಸಿ ವ್ಯಾಲಿ ನೀರು ಹರಿಯುವ ಕೆರೆಗಳ ಪಕ್ಕದಲ್ಲಿರೊ ಬೋರ್ ವೆಲ್ ರೀಚಾರ್ಜ್ ಆಗಿದ್ದು, ಅಲ್ಲಿ ಬೆಳೆಯುವ ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳಲ್ಲು ಗುಣಮಟ್ಟ ಇಳಿಕೆಯಾಗಿ, ಬೇಡಿಕೆ ಕುಸಿದಿದೆ ಎಂದು ಗೊವಿಂದರಾಜು ಹಾಗು ಜಿಲ್ಲೆಯ ತರಕಾರಿ ವ್ಯಾಪಾರಿಗಳು ಆರೋಪಿಸಿದ್ದಾರೆ. ಆದರೆ ಈ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಲು ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕಿ ಗಾಯತ್ರಿ ನಿರಾಕರಿಸಿದ್ದು, ಪ್ರತಿಕ್ರಿಯೆ ನೀಡಲು ಹಿರಿಯ ಅಧಿಕಾರಿಗಳ ಅನುಮತಿ ಬೇಕೆಂಬ ಸಬೂಬು ನೀಡಿದ್ದಾರೆ.