ನೋಯ್ಡಾ: ಉತ್ತರಪ್ರದೇಶ ಚುನಾವಣೆ (UttaraPradesh) ಮೇಲೆ ಎಲ್ಲಾ ಪಕ್ಷಗಳೂ ಕಣ್ಣಿಟ್ಟಿವೆ. ಉತ್ತರಪ್ರದೇಶ ಗೆದ್ದವರು ಇಡೀ ದೇಶವನ್ನೇ ಗೆಲ್ಲುತ್ತಾರೆ ಎಂಬುದು ಚುನಾವಣಾ ನಾಡ್ನುಡಿ. ಹೀಗಾಗಿ ಬಿಜೆಪಿ ಉತ್ತರಪ್ರದೇಶದಲ್ಲಿ ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಸಮಾಜವಾದಿ ಪಾರ್ಟಿ (Samajwadi Party) ಮತ್ತು ಬಹುಜನ ಸಮಾಜವಾದಿ ಪಾರ್ಟಿ (Bahujana Samajwadi Party) ಮತ್ತೆ ಅಧಿಕಾರದ ಗದ್ದುಗೆಗೆ ಏರುವ ಪರಿಶ್ರಮದಲ್ಲಿದೆ.
ಇನ್ನೂ ಕಾಂಗ್ರೆಸ್ಗೆ (Congress) ಉತ್ತರಪ್ರದೇಶದಲ್ಲಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಈ ನಡುವೆ ದೆಹಲಿಯಲ್ಲಿ ಆರಂಭಿಸಿದ ಶಿಕ್ಷ-ಆರೋಗ್ಯ ಮತ್ತು ಮೂಲಭೂತ ಸೌಕರ್ಯ ವಿಭಾಗದಲ್ಲಿನ ಕ್ರಾಂತಿಯನ್ನು ಉತ್ತರಪ್ರದೇಶಕ್ಕೂ ವಿಸ್ತರಿಸಲು ಮುಂದಾಗಿರುವ ಎಎಪಿ (AAP) ಈಗಾಗಲೇ ಚುನಾವಣಾ ಪ್ರಚಾರಗಳನ್ನು ಆರಂಭಿಸಿದೆ. ಅಲ್ಲದೆ, ಜನ ಸಾಮಾನ್ಯರಿಗೆ 300 ಯೂನಿಟ್ವರೆಗೆ ಉಚಿತ ಕರೆಂಟ್ ನೀಡುವ ಭರವಸೆಯನ್ನೂ ನೀಡಿದೆ ಎಂದು ವರದಿಯಾಗಿದೆ.
ಗೆದ್ದರೆ ವಿದ್ಯುತ್ ಉಚಿತ: ಅರವಿಂದ ಕೇಜ್ರಿವಾಲ್;
ಉಚಿತ ವಿದ್ಯುತ್ ಮತ್ತು ಉಚಿತ ಕುಡಿಯುವ ನೀರು ನವ ದೆಹಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಘೋಷಿಸಿದ ಜನಪ್ರಿಯ ಯೋಜನೆಗಳಲ್ಲೊಂದು. ಈ ಯೋಜನೆಗಳ ಜನಪ್ರಿಯತೆ ಕಾರಣಕ್ಕೆ ಎಎಪಿ ಈವರೆಗೆ ದೆಹಲಿಯಲ್ಲಿ ಅಧಿಕಾರವನ್ನು ಜನರ ಭರವಸೆಯನ್ನೂ ಉಳಿಸಿಕೊಂಡಿದೆ. ಹೀಗಾಗಿ ಈ ಭರವಸೆಯನ್ನು ಉತ್ತರಪ್ರದೇಶಕ್ಕೂ ವಿಸ್ತರಿಸಲು ಮುಂದಾಗಿರುವ ಎಎಪಿ ಗೌತಮಬುದ್ಧ ನಗರದಿಂದ ಚುನಾವಣಾ ಅಭಿಯಾನವನ್ನು ಆರಂಭಿಸಿದ್ದು, ರಾಜ್ಯದ ಜನತೆಗೆ “ಉಚಿತ ವಿದ್ಯುತ್” ನೀಡುವ ಭರವಸೆಯನ್ನು ಮುಂದಿಟ್ಟು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದೆ.