ಒಂದೇ ಕಾರಣದಿಂದ ಪಂದ್ಯ ಕೈಚೆಲ್ಲಿತಾ ಆರ್ಸಿಬಿ, ತವರಿನ ಸೋಲಿಗೆ ನಿರಾಶರಾಗಬೇಕಿಲ್ಲ

ಬೆಂಗಳೂರು: ಐಪಿಎಲ್ 2025 ಟೂರ್ನಿಯಲ್ಲಿ ಆರ್ಸಿಬಿ ಭರ್ಜರಿ ಗೆಲುವಿನ ನಾಗಾಲೋಟದಲ್ಲಿತ್ತು. ಆದರೆ 3ನೇ ಪಂದ್ಯದಲ್ಲಿ ಸೋಲಿನ ಕಹಿ ಎದುರಾಗಿದೆ. ತವರನಲ್ಲೇ ಸೋಲು ಅನ್ನೋದು ಅಭಿಮಾನಿಗಳ ನಿರಾಸೆಗೂ ಕಾರಣವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ದ ಆರ್ಸಿಬಿ 169 ರನ್ ಸಿಡಿಸಿದರೂ ಸಾಕಾಗಲಿಲ್ಲ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಲ್ಪಮೊತ್ತವನ್ನು ಡೆಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಆರ್ಸಿಬಿ ಸೋಲು ಒಪ್ಪಿಕೊಳ್ಳಬೇಕಾಯಿತು. ಗುಜರಾತ್ ಟೈಟಾನ್ಸ್ 8 ವಿಕೆಟ್ ಗೆಲುವು ಕಂಡಿತು.
ಸೋಲಿಗೆ ಒಂದು ಕಾರಣ
ಆರ್ಸಿಬಿ ಸೋಲಿಗೆ ಹಲವು ಕಾರಣಗಳಿವೆ. ಈ ಪೈಕಿ ಎಲ್ಲರೂ ಬೊಟ್ಟು ಮಾಡುವಂತ ಬ್ಯಾಟಿಂಗ್ ಅಬ್ಬರ ಕೊರತೆ ಪ್ರಮುಖ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 200 ರನ್ ಟಾರ್ಗೆಟ್ ನೀಡಿದರೂ ಡಿಫೆಂಡ್ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಹೀಗಿರುವಾಗ ಆರ್ಸಿಬಿ 169 ರನ್ ಸಿಡಿಸಿರಿವುದು ತೀವ್ರ ಹಿನ್ನಡೆಗೆ ಕಾರಣವಾಗಿದೆ. ಆರ್ಸಿಬಿಯ ಕಳೆದೆರಡು ಪಂದ್ಯದ ಪ್ರದರ್ಶನಕ್ಕೆ ಹೋಲಿಸಿ ಹಲವರು ಕ್ರಿಕೆಟ್ ತಜ್ಞರು ಟಾಸ್ ಸೋಲು ಗೆಲುವು ಆರ್ಸಿಬಿಗೆ ಪ್ರಮುಖವಾಗಲ್ಲ ಎಂದಿದ್ದರು. ಆದರೆ ಇದು ಪ್ರಮುಖ ಕಾರಣವಾಗಿದೆ.
ಗುಜರಾತ್ ಟೈಟಾನ್ಸ್ ವಿರುದ್ದ ಟಾಸ್ ಸೋಲು ಆರ್ಸಿಬಿ ಸೋಲಿಗೆ ಒಂದು ಪ್ರಮುಖ ಕಾರಣವಾಗಿದೆ. ಗುಜರಾತ್ ವಿರುದ್ದ ಕಣಕ್ಕಿಳಿದ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಅತ್ಯಂತ ಸವಾಲು. ಈ ಪಿಚ್ ಹಾಗೂ ಕ್ರೀಡಾಂಗಣದಲ್ಲಿ ಚೇಸ್ ಕೊಂಚ ಸುಲಭ. ಹೀಗಾಗಿ ಟಾಸ್ ಸೋಲು ತಂಡದ ಅರ್ಧ ಗೆಲುವನ್ನೇ ಕಸಿದುಕೊಂಡಿತ್ತು. ನಿರೀಕ್ಷಿತ ರನ್ ಬರಲಿಲ್ಲ. ವಿಕೆಟ್ ಉಳಿಸಿಕೊಂಡು ಹೋರಾಟ ನೀಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದ ರನ್ ಕುಸಿಯಿತು. ತವರಿನ ಒಂದು ಸೋಲು ಆರ್ಸಿಬಿಯನ್ನು ಯಾವುದೇ ರೀತಿಯಲ್ಲೂ ಆತ್ಮವಿಶ್ವಾಸ ಕುಗ್ಗಿಸುವ ಸಾಧ್ಯತೆ ಇಲ್ಲ.
ಬಟ್ಲರ್ ಬಿಸಿ
170 ರನ್ ಚೇಸಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಅಬ್ಬರಕ್ಕೆ ಉತ್ತರ ಇಲ್ಲದಾಯಿತು. ಸಾಯಿ ಸುದರ್ಶನ್ ಆರಂಭ, ಜೋಸ್ ಬಟ್ಲರ್ ಅಬ್ಬರಕ್ಕೆ ಆರ್ಸಿಬಿ ಸೋಲು ಕಂಡಿತು.ಸಾಯಿ ಸುದರ್ಶನ್ 49 ರನ್ ಸಿಡಿಸಿದರೆ, ನಾಯಕ ಶುಭಮನ್ ಗಿಲ್ 14 ರನ್ ಸಿಡಿಸಿ ಔಟಾದರು. ಆದರೆ ಜೋಸ್ ಬಟ್ಲರ್ ಅಜೇಯ 73 ರನ್ ಸಿಡಿಸಿದರು. ಶೆರ್ಫಾನೆ ರುದರ್ಫೋರ್ಡ್ ಅಜೇಯ 30 ರನ್ ಸಿಡಿಸಿದರು. ಈ ಮೂಲಕ 17.5 ಓವರ್ಗಳಲ್ಲಿ ಗುಜರಾತ್ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ನೋ ಟೆನ್ಶನ್
ಆರ್ಸಿಬಿ ಅಭಿಮಾನಿಗಳು ಅದೆಷ್ಟೋ ಸೋಲು ನೋಡಿದ್ದಾರೆ. 42 ರನ್ಗೆ 4 ವಿಕೆಟ್ ಕಳೆದುಕೊಂಡು ಬಳಿಕ 169 ರನ್ ಸಿಡಿಸುವಲ್ಲಿ ಆರ್ಸಿಬಿ ಯಶಸ್ವಿಯಾಗಿದೆ. ಆರ್ಸಿಬಿ ಹೀನಾಯವಾಗಿ ಸೋತಿಲ್ಲ ಅನ್ನೋದು ಸಮಾಧಾನ. ಹಾಗಂತ ಸೋಲಿಗೆ ನಿರಾಸೆ ಬೇಕಿಲ್ಲ. ಮುಂದಿನ ಪಂದ್ಯದಲ್ಲಿ ಆರ್ಸಿಬಿ ಕಮ್ಬ್ಯಾಕ್ ಮಾಡುವ ವಿಶ್ವಾಸದಲ್ಲಿದೆ.
ಅಂಕಪಟ್ಟಿ
ಅಂಕಪಟ್ಟಿಯಲ್ಲಿ ಆರ್ಸಿಬಿ ಮೊದಲ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಇದೀಗ ಮೊದಲೆರೆಡು ಸ್ಥಾನ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದೆ.
ವರದಿ: ಮೊಹಮ್ಮದ್ ಶಫಿ ಸ್ಪೋರ್ಟ್ಸ್ ಬ್ಯೂರೋ tv8kannada ಬೆಂಗಳೂರು