Raichur|ಸರಿಯಾದ ಮಾಹಿತಿ ಇಲ್ಲದೇ ಸಭೆಗೆ ಚಿಪ್ಸ್ ತಿನ್ನಲು ಬರ್ತೀರಾ? : ಕಾರ್ಮಿಕ ಸಚಿವ ಸಂತೋಷ್ ಲಾಡ್ ಗರಂ

ರಾಯಚೂರು: ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡದೇ ಕಾಯ್ದೆಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಮಾಹಿತಿ ಇರದಿದ್ದರೆ ಮೀಟಿಂಗ್ ಗೆ ಚಿಪ್ಸ್ ತಿನ್ನಲು ಬಂದಿದ್ದೀರಾ? ಕೇವಲ ಕಚೇರಿಗೆ ಬಂದು ಹೋಗೋದಷ್ಟೇ ಕೆಲಸಾನಾ, ಎಂದು ಇಲಾಖೆಯ ಅಧಿಕಾರಿಗಳ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ಸ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಕಲಬುರಗಿ ಕಂದಾಯ ವಿಭಾಗದ ಎಲ್ಲಾ ಜಿಲ್ಲೆಗಳ ಕಾರ್ಮಿಕ ಇಲಾಖೆಯ ಪ್ರಗತಿ ಪತಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಯಲ್ಲಿ ಸಚಿವರು ರಾಯಚೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಗುತ್ತಿಗೆ ಕಾರ್ಮಿಕರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಕಾಯಂಗೊಳಿಸಿಲ್ಲ. ಎಲ್ಲಾ ಕಾರ್ಖಾನೆಗಳಲ್ಲಿ, ಎಷ್ಟು ಕಾರ್ಮಿಕರಿದ್ದಾರೆ, ಫ್ಯಾಕ್ಟರಿಗಳನ್ನು ಕ್ಯಾಟಗರಿ ವೈಸ್ ಮಾಡಿದೀರಾ ಎಂದು ಪ್ರಶ್ನೆ ಮಾಡಿದಾಗ, ಸಚಿವರ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಅಧಿಕಾರಿಯ ವಿರುದ್ಧ ಗರಂ ಆದ ಸಚಿವರು,ಕಾರ್ಮಿಕರ ಕಾಯ್ದೆಗಳ ಬಗ್ಗೆ, ಕಾರ್ಮಿಕರ ಕಾಯ್ದೆಗಳನ್ನು ಉಲ್ಲಂಘಿಸಿದ ಕಾರ್ಖಾನೆಗಳ ಬಗ್ಗೆ ಸರಿಯಾದ ಮಾಹಿತಿ ಇರದಿದ್ದರೆ ಸಭೆಗೆ ಚಿಪ್ಸ್ ತಿನ್ನಲು ಬರ್ತೀರಾ ಎಂದು ಕೋಪಗೊಂಡರು.
ಅನೇಕ ವರ್ಷಗಳಿಂದ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂಬ ನಿಯಮವಿದೆ, ಈಬಗ್ಗೆ ಪರಿಶೀಲಿಸಬೇಕು. ಕಾರ್ಖಾನೆಗಳಿಗೆ ಹಾಗೂ ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಗುತ್ತಿಗೆ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿಕೊಳ್ಳಬೇಕು.� ಕಾರ್ಖಾನೆಗಳನ್ನು ಎಬಿಸಿಡಿ ಕ್ಯಾಟಗರಿ ಮಾಡಬೇಕು. ಕಾರ್ಖಾನೆಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆ, ಮಹಿಳೆಯರು, ಪುರುಷರು ಸಂಖ್ಯೆ, ಎಷ್ಟು ವರ್ಷ ಅನುಭವವಿದೆ ಎಂಬುವುದರ ಬಗ್ಗೆ ಮಾಹಿತಿ ಪಡೆಯಬೇಕು. ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸಿದ ಕಾರ್ಖಾನೆಗಳ ಮಾಲೀಕರ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ರಾಯಚೂರು ತಾಲೂಕು ವ್ಯಾಪ್ತಿಯ ಯರಮರಸ್ ನಲ್ಲಿ ಇರುವ ವೈಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಪವರ್ ಮೆಕ್ ಕಂಪನಿ ನಿರ್ವಹಣೆ ಮಾಡುತ್ತಿದ್ದು 800 ಕಾರ್ಮಿಕರಿದ್ದು, 1500 ಕಾರ್ಮಿಕ ಕಾರ್ಡ್ ಹಂಚಿಕೆ ಮಾಡಿದ್ದಾರೆ. ಬೋಗಸ್ ಕಾರ್ಡ್ ಹಂಚಿಕೆಯಾದ ಬಗ್ಗೆ ಕಾರ್ಮಿಕ ಸಂಘಟನೆಗಳಿಂದ ದೂರು ನೀಡಿದರೂ ಪರಿಶೀಲನೆ ಮಾಡಿಲ್ಲ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.
ಸಚಿವ ಲಾಡ್ ಪ್ರತಿಕ್ರಿಯಿಸಿ, ಯಾವುದೇ ಕಾರ್ಖಾನೆಗಳಲ್ಲಿ ಕಾರ್ಮಿಕರ, ಮಾಲೀಕರ ಮಧ್ಯೆ ವಿವಾದ ಅಥವಾ ಕಾರ್ಮಿಕರ ಸಮಸ್ಯೆಗಳಿದ್ದರೆ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ಸ್ಥಳೀಯ ಶಾಸಕರು ಯಾವುದಾದರು ದೂರು ನೀಡಿದ್ದಲ್ಲಿ ತಕ್ಷಣೇ ಸ್ಪಂದಿಸಬೇಕು ಹಾಗೂ ಅವರ ವ್ಯಾಪ್ತಿಯ ಕಾರ್ಖಾನೆಗಳ ಏನಾದರೂ ಸಮಸ್ಯೆ ಬಗೆಹರಿಸುವಾಗ ಶಾಸಕರಿಗೆ ಮಾಹಿತಿ ನೀಡಿ ಸಹಕಾರ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಖಾನೆಗಳಿಗೆ ವಿಸಿಟ್ ಮಾಡಿ: ಕಾರ್ಮಿಕ ಅಧಿಕಾರಿಗಳು ಕಾರ್ಖಾನೆಗಳಿಗೆ ಅಯಾಗ ಭೇಟಿ ನೀಡಿ ಬಾಲಕಾರ್ಮಿಕರಿದ್ದರೆ ಕಾರ್ಖಾನೆ ಮಾಲೀಕರ ವಿರುದ್ದ ದೂರು ದಾಖಲಿಸಬೇಕು. ಕೇವಲ ಕಚೇರಿಯಲ್ಲಿ ಕಾಲ ಕಳೆಯದೇ ಫೀಲ್ಡ್ ವಿಸಿಟ್ ಮಾಡಬೇಕು ಎಂದು ಹೇಳಿದರು.
ಕಾರ್ಮಿಕರ ಇಲಾಖೆಯ ದೂರುಗಳಿಗೆ ಸಂಬಂದಿಸಿದಂತೆ ಟೋಲ್ ಫ್ರೀ ನಂಬರ್ ತೆರೆಯಬೇಕು. ಜಿಲ್ಲಾಧಿಕಾರಿ, ಎಸ್ಪಿ, ಹಾಗೂ ಸಾರ್ವಜನಿಕರಿಗೆ ತಿಳಿಯುವಂತೆ ಅಗತ್ಯ ಪ್ರಚಾರ ಮಾಡಬೇಕು ಎಂದು ಸೂಚನೆ ನೀಡಿದರು.
ತಾಲೂಕು ವಾರು ಕಾರ್ಮಿಕರನೋಂದಣೆ ಬಗ್ಗೆ ಮಾಹಿತಿ ಕೇಳಿದ ಸಚಿವ ಸಂತೋಷ್, ಬಹುತೇಕ ಎಲ್ಲಾ ಅಧಿಕಾರಿಗಳು ನೀಡುವ ಮಾಹಿತಿಯಿಂದ ಅತೃಪ್ತರಾದ ಸಚಿವರು, ಒಂದು ತಾಲೂಕಿನಲ್ಲಿನ ಕಾರ್ಮಿಕರ ನೋಂದಣೆ ಸರಿಯಾಗಿ ಸಂಗ್ರಹಿಸದಿದ್ದರೆ ಏನು, ಕೆಲಸ ಮಾಡುತ್ತೀರಿ, ನೆಮ್ಮ ಇಂತಹ ಬೇಜವಾಬ್ದಾರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ರೇಗಿದರು.
ಸಭೆಯಲ್ಲಿ ಮಾನ್ವಿ ಶಾಸಕ ಹಂಪಯ್ಯ ನಾಯಕ ಸಾಹುಕಾರ್, ದೇವದುರ್ಗ ಶಾಸಕಿ ಕರೆಮ್ಮ ನಾಯಕ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿ.ಪಂ ಸಿಇಒ ರಾಹುಲ್ತುಕಾರಾಂ ಪಾಂಡ್ವೆ ಉಪಸ್ಥಿತರಿದ್ದರು.
ವರದಿ: ವಿಶ್ವನಾಥ್ ಸಾಹುಕಾರ್ tv8kannada ರಾಯಚೂರು