ಸಿನಿಮಾ ಶೈಲಿಯಲ್ಲಿ ಕಳ್ಳನನ್ನ ಹಿಡಿದ ಪೊಲೀಸ್!
ಬುಧವಾರ ಈ ಘಟನೆ ನಡೆದಿದ್ದು, ವರುಣ್ ಆಳ್ವ ಅವರ ಮಿಂಚಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು, ಜನದಟ್ಟಣೆ ಪ್ರದೇಶದಲ್ಲಿ ಕಳ್ಳನ ಹಡೆಮುರಿ ಕಟ್ಟಿದ ದೃಶ್ಯಗಳನ್ನು ಸಾರ್ವಜನಿಕರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ರಾಜಸ್ಥಾನದ ಗ್ರಾನೈಟ್ ಕಾರ್ಮಿಕ ಪ್ರೇಮ್ ನಾರಾಯಣ್ ಯೋಗಿ ನೆಹರು ಮೈದಾನದ ಬಳಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹರೀಶ್ ಪೂಜಾರಿ (32) ಎಂಬಾತ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದನು.
ಯೋಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸಾರ್ವಜನಿಕರು ಹರೀಶ್ ಪೂಜಾರಿಯನ್ನು ಹಿಂಬಾಲಿಸಲು ಪ್ರಾರಂಭಿಸಿದ್ದರು. ಇದೇ ಸಮಯದಲ್ಲಿ ಆಳ್ವ ಸೇರಿದಂತೆ ಪೊಲೀಸ್ ತಂಡ ಸ್ಥಳದಲ್ಲಿತ್ತು.
ಕೂಡಲೇ ಪೊಲೀಸರು ಮೂರ್ನಾಲ್ಕು ಕಡೆ ವಿಂಗಡನೆಯಾಗಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಇದೇ ತಂಡದ 20 ವರ್ಷದ ಶಮಂತ್ ಎಂಬಾತನ್ನು ಸಹ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರಾಜೇಶ್ ಪರಾರಿಯಾಗಿದ್ದಾನೆ. ಈ ತಂಡ ನಗರದ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಆ್ಯಕ್ಟಿವ್ ಆಗಿತ್ತು.
ಇದೀಗ ವರುಣ್ ಆಳ್ವ ಅವರಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿ ಗೌರವಿಸಲಾಗಿದೆ. ಗುರುವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ವರುಣ್ ಆಳ್ವ ಅವರಿಗೆ 10 ಸಾವಿರ ಬಹುಮಾನ ನೀಡಿ ಗೌರವಿಸಿದರು