ರಾಜ್ಯ

ಶಿಶುಪಾಲನಿಗೆ ತಕ್ಕ ಶಾಸ್ತಿ ಮಾಡಿದ್ದ ಕೃಷ್ಣನೇ ಪ್ರತಿಕಾರ ತೆಗೆದುಕೊಳ್ಳುತ್ತಾನೆ: ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

ಉಡುಪಿ: ಶ್ರೀ ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕ ಶಾಸ್ತಿ ಮಾಡಿದ್ದ, ಪದ್ಮವಿಭೂಷಣ ಪ್ರಶಸ್ತಿ ಬಂದಿರುವುದು ನನ್ನ ಗುರುಗಳಿಗೆ. ಹಾಗಾಗಿ ಹಂಸಲೇಖ ಅವರು ನನ್ನ ಗುರುಗಳನ್ನೇ ಟೀಕಿಸಿರಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (Sri Vishwa Prasanna Tirtha Swamiji) ಹೇಳಿದರು.

ನಗರದಲ್ಲಿ, ಸಂಗೀತ ನಿರ್ದೇಶಕ ಹಂಸಲೇಖ (music director Hamsalekha) ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ಮಾತು ಹಂಸಲೇಖ ಬಾಯಿಂದ ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ. ಪ್ರಚಾರಕ್ಕೋಸ್ಕರ ಸಾಕಷ್ಟು ಮಂದಿ ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ.

ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ವಿಶ್ವೇಶತೀರ್ಥರು ಬಯಸಿದ್ದರು. ಗುರುಗಳು ಜನರ ಹೃದಯದಲ್ಲಿ ಯಾವ ಕೃಷ್ಣನನ್ನು ಕಂಡಿದ್ದರೋ ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ ಎಂದರು.

ಅಲ್ಲದೇ, ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ, ದಲಿತರು ನಮ್ಮಿಂದ ಹೊರತಲ್ಲ. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಗುರುಗಳ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

ನಿಂದನೆ ಮಾಡಿದರ ಬಗ್ಗೆ ಕನಿಕರ ಇದೆ : ಪರ್ಯಾಯ ಅದಮಾರು ಶ್ರೀ ಈಶ ಪ್ರಿಯ ಸ್ವಾಮಿಗಳ

ಹಂಸಲೇಖ ಹೇಳಿಕೆಗೆ ಪರ್ಯಾಯ ಅದಮಾರು ಶ್ರೀ ಈಶ ಪ್ರಿಯ ಸ್ವಾಮಿಗಳ ಖಂಡಿಸಿ ಮಾತನಾಡಿ, ಮನುಷ್ಯನಿಗೆ ಕರ್ತವ್ಯಗಳು, ಜವಾಬ್ದಾರಿಗಳು ಇರುತ್ತದೆ. ಅವರವರ ದೃಷ್ಟಿಕೋನ ಎನ್ನುವುದು ಒಂದು ಇರುತ್ತದೆ. ಆದ್ರೆ ಹಂಸಲೇಖ ನೋಡಿದ ಪ್ರಪಂಚ ಅಷ್ಟೇ ಅಂತ ಇದರಿಂದ ಗೊತ್ತಾಗುತ್ತದೆ. ಪೇಜಾವರ ಶ್ರೀಗಳ ಬಗ್ಗೆ ನಿಂದನೆ ಮಾಡಿದವರ ಬಗ್ಗೆ ಕನಿಕರ ಇದೆ. ಆದ್ರೆ ವಿಶಾಲವಾದ ದೃಷ್ಟಿ ಅವರಿಗೆ ಇಲ್ಲ ಎನ್ನುವ ಬೇಸರ ನಮಗೆ ಇದೆ‌ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button