ವಿಜಯಪುರ: ಉಪ ಚುನಾವಣೆ (Karnataka Byelection) ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆ ಬಿದ್ದಿದೆ. ಇಂದು ಮನೆ ಮನೆಗಳಿಗೆ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದಾರೆ. ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಲ್ಲಿ (Hangal And Sindagi) ನಿರಂತರವಾಗಿ ಪ್ರಚಾರ ನಡೆಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (Former Prime Minister HD Devegowda) ಸುಸ್ತಾಗಿದ್ದು, ವಿಜಯಪುರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ದೇವೇಗೌಡರಿಗೆ ಮಂಡಿನೋವು ಮತ್ತು ಸೊಂಟನೋವು ಕಾಣಿಸಿಕೊಂಡ ಹಿನ್ನೆಲೆ ಫಿಜಿಯೋಥೆರೆಪಿ ಮತ್ತು ಮಸಾಜ್ ಟ್ರೆಟ್ಮೆಂಟ್ ಪಡೆದುಕೊಂಡಿದ್ದಾರೆ. ಕಳೆದ 10 ದಿನಗಳಿಂದ ಎರಡು ದಿನಕ್ಕೊಮ್ಮೆ ದೇವೇಗೌಡರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಪುರ ನಗರದ ಕುಚನೂರು ಆಸ್ಪತ್ರೆ ವೈದ್ಯ ಡಾ. ಬಾಬು ಚಿಕಿತ್ಸೆ ನೀಡುತ್ತಿದ್ದಾರೆ.

ಬೆಳಗ್ಗೆ ಮತ್ತು ಸಂಜೆ ಟ್ರೀಟ್ಮೆಂಟ್
ಚುನಾವಣೆ ಪ್ರಚಾರ ಹಿನ್ನೆಲೆ ದೇವೇಗೌಡರು ವಿಜಯಪುರ ನಗರದ ಸ್ಪೂರ್ತಿ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದಾರೆ. ಡಾ.ಬಾಬು ಅವರೇ ಎರಡು ದಿನಕ್ಕೊಮ್ಮೆ ರೆಸಾರ್ಟಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ದಿನಕ್ಕೆ ಎರಡು ಬಾರಿಯಂತೆ ಬೆಳಗ್ಗೆ ಮತ್ತು ಸಂಜೆ ದೇವೇಗೌಡರಿಗೆ ಮಸಾಜ್ ಟ್ರೀಟ್ಮೆಂಟ್ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಕಾಣುತ್ತಿದೆ. ಸದ್ಯ ತಮ್ಮದೇ ಕ್ಷೇತ್ರವಾಗಿರುವ ಸಿಂದಗಿಯನ್ನು ಉಳಿಸಿಕೊಳ್ಳಲು ಜೆಡಿಎಸ್ ಪ್ರಯತ್ನಿಸುತ್ತಿದೆ. ಮಾಜಿ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದಾಗಿ ಸಿಂದಗಿ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಆದ್ರೆ ಕಾಂಗ್ರೆಸ್ ಮನಗೂಳಿ ಅವರ ಪುತ್ರನನ್ನ ಸೆಳೆದು ಟಿಕೆಟ್ ನೀಡಿದೆ. ನಾಜೀಯಾ ಅಂಗಡಿ ಜೆಡಿಎಸ್ ಟಿಕೆಟ್ ಪಡೆದು ಸಿಂದಗಿಯಿಂದ ಸ್ಪರ್ಧೆ ಮಾಡಿದ್ದಾರೆ.
89ನೇ ವಯಸ್ಸಿನಲ್ಲಿ ಮತ ಕೇಳಲು ಬಂದಿದ್ದೇನೆ
ಸಿಂದಗಿ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ್ದ ದೇವೇಗೌಡರು, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಹಾಗಾಗಿ 89ನೇ ವಯಸ್ಸಿನಲ್ಲಿ ಮತ ಕೇಳಲು ನಿಮ್ಮ ಮುಂದೆ ಬಂದಿದ್ದೇನೆ. ನಾನು ಸತ್ತರೂ ರಾಜ್ಯದಲ್ಲಿ ಪ್ರಾದೇಶಿಕ ಇರಬೇಕಿದೆ. ಇನ್ನು ಇಷ್ಟು ದಿನ ಬದುಕಿತ್ತಿನೋ ಗೊತ್ತಿಲ್ಲ. ಇದು ನನ್ನ ಜೀವನದ ಕೊನೆಯ ಘಟ್ಟ ಇದಾಗಿದೆ. ಈ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಯುತ್ತೆ ಅನ್ನೋ ನಂಬಿಕೆ ಇದೆ. ಹಾಗಾಗಿ ನೀವೆಲ್ಲರೂ ಜೆಡಿಎಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.