ಮಂಗಳೂರು: ಹೆಸರು ಸ್ನೇಹಾ ಭಟ್. ಮಂಗಳೂರು ಹೊರವಲಯದ ಉಳ್ಳಾಲ ನಿವಾಸಿ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಇವರು ಬಿಡುವಿನ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿಯು ಕೆಲಸ ನಿರ್ವಹಿಸುತ್ತಾರೆ. ಇದೆಲ್ಲದರ ನಡುವೆ ಇವರು ಕೃಷಿ ಪ್ರೇಮಿಯೂ ಹೌದು. ಆದರೆ ನಗರ ಭಾಗದಲ್ಲಿ ಇರುವುದರಿಂದ ಜೊತೆಗೆ ಜಾಗದ ಕೊರತೆಯು ಇದ್ದುದದರಿಂದ ಪ್ರಾರಂಭದಲ್ಲಿ ತಮ್ಮ ಮನೆಯ ತಾರಸಿ ಮೇಲೆಯೆ ತಾರಸಿ ಕೃಷಿಯನ್ನು (Terrace Agriculture) ಮಾಡುತ್ತಿದ್ರು.
ಮನೆಯ ಬಳಕೆಗೆ ಬೇಕಾದ ತರಕಾರಿಗಳನ್ನು (Vegetables) ತಮ್ಮ ಮನೆಯ ಮೇಲೆಯೆ ಬೆಳೆಸುತ್ತಿದ್ರು. ಆದ್ರೆ ತಾವರೆಯನ್ನು (Lotus) ಬೆಳೆಸಬೇಕು ಎಂದು ಆಸೆಯಾದಾಗ ಯಾಕೆ ನಮ್ಮ ಮನೆಯಲ್ಲೇ ಬೆಳೆಸಬಾರದು ಎಂಬ ಆಲೋಚನೆಯನ್ನು ಮಾಡಿದ್ರು. ಆ ಆಲೋಚನೆಯೇ ಇಂದು ವೆರೈಟಿ ವೆರೈಟಿ ತಾವರೆ ಗಿಡಗಳನ್ನು ಬೆಳೆಸುವ ಹವ್ಯಾಸವಾಗಿ ಬದಲಾಗಿದೆ.
ತಾವರೆಗಳನ್ನು ಬೃಹದಾದ ಕೆರೆಗಳಲ್ಲಿ ಮಾತ್ರ ಬೆಳೆಸಬಹುದು ಎಂದು ಎಲ್ಲರಂತೆ ಇವರು ಸಹ ಅಂದುಕೊಂಡಿದ್ರು. ಆದ್ರೆ ಹೊಸ ಪ್ರಯೋಗ ಮಾಡಿ ಪ್ಲಾಸ್ಟಿಕ್ ಟಬ್ಗಳಲ್ಲಿ ಯಾಕೆ ಬೆಳೆಸಬಾರದು ಅಂತಾ ಆ ಪ್ರಯೋಗಕ್ಕೆ ಮುಂದಾದ್ರು. ಈ ಪ್ರಯೋಗವೇ ಇವತ್ತು 85ಕ್ಕೂ ಹೆಚ್ಚು ವೆರೈಟಿಯ ತಾವರೇ ಗಾರ್ಡನ್ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 150ಕ್ಕೂ ಹೆಚ್ಚು ಪಾಟ್ಗಳಲ್ಲಿ 85ಕ್ಕೂ ಹೆಚ್ಚು ವೆರೈಟಿಯ ತಾವರೇ ಗಿಡಗಳು ಇವರ ಮನೆಯ ತಾರಸಿ ಮೇಲಿವೆ.