“ನನ್ನ ಬುದ್ದಿಯನ್ನೇಲ್ಲಾ ಖರ್ಚು ಮಾಡಿ ರಹಿತರ ಸಮಸ್ಯೆ ಪರಿಹಸಿರುವ ಪ್ರಯತ್ನ ಮಾಡಿದ್ದೇನೆ”
ಬೆಂಗಳೂರು, ಸೆ.22- ರಾಜ್ಯದಲ್ಲಿರುವ ವಸತಿ ರಹಿತರ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಾಣಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಸದಸ್ಯರಾದ ಹಣಮಂತಪ್ಪ ನಿರಾಣಿ ಅವರು ವಸತಿ ಇಲಾಖೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಎರಡು ವರ್ಷಗಳಿಂದ ನನಗೆ ತಿಳಿದ ಬುದ್ದಿಯನ್ನೇಲ್ಲಾ ಖರ್ಚು ಮಾಡಿ ವಸತಿ ರಹಿತರ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನ ಮಾಡುತ್ತಿದ್ದೇನೆ.
ಶಾಸಕರಾದ ರಮೇಶ್ ಕುಮಾರ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರತಿಗ್ರಾಮಕ್ಕೂ ಭೇಟಿ ನೀಡಿ ಜನರ ಸಭೆ ನಡೆಸಿ ಎಷ್ಟು ಮಂದಿಗೆ ಮನೆಗಳ ಕೊರತೆ ಇದೆ ಎಂಬ ವರದಿ ಸಿದ್ಧ ಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರ ಆಧಾರದ ಮೇಲೆ ಮನೆ ಹಾಗೂ ನಿವೇಶನ ನೀಡಲು ಅನುಕೂಲವಾಗಲಿದೆ.
ಇದೇ ರೀತಿಯ ಪ್ರಾಯೋಗಿಕ ಯೋಜನೆಯನ್ನು ಮುಂದಿನ ದಿನಗಳಲ್ಲಿ ಚಾಮರಾಜನಗರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದರು.ಈ ಮೊದಲು ಕೊಟ್ಟವರಿಗೆ ಮನೆ ಕೊಡುವ ಅವ್ಯವಸ್ಥೆ ಸರಿ ಪಡಿಸಬೇಕಿದೆ.
ಈಗಲೂ ಮನೆಗಳಿಗಾಗಿ ಲಕ್ಷಾಂತರ ಅರ್ಜಿಗಳು ಬರುತ್ತಲೇ ಇವೆ. ರಾಜ್ಯಾದ್ಯಂತ 6800ಕ್ಕೂ ಮೇಲ್ಪಟ್ಟ ಜಾಗಗಳನ್ನು ಹಲವು ವರ್ಷಗಳಿಂದ ಹಿಂದೆ ಗುರುತಿಸಿ ಖರೀದಿ ಮಾಡಲಾಗಿದೆ. ಎರಡು ಮೂರು ಭಾರಿ ಗೆದ್ದು ಬಂದಿರುವ ಶಾಸಕರು ಆ ಜಾಗ ಅಭಿವೃದ್ಧಿ ಪಡಿಸಿ ನಿವೇಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಜಾಗವನ್ನು ಅಭಿವೃದ್ಧಿ ಪಡಿಸಿ ನಿವೇಶನ, ಮನೆ ನಿರ್ಮಿಸಲಾಗುವುದು ಎಂದರು.
ವಸತಿ ಇಲಾಖೆ ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಸೇರಿ ಹಲವು ಇಲಾಖೆಗಳ ನಡುವೆ ಸಿಲುಕಿ ಇಕ್ಕಳದ ನಡುವಿನ ಪರಿಸ್ಥಿತಿ ಅನುಭವಿಸುತ್ತಿದ್ದೇನೆ. ಮಳೆ ಬಂದು ನೆನೆಯುತ್ತಾ ಮನೆಯಿಲ್ಲದ ಜನ ನನಗೆ ದೂರವಾಣಿ ಕರೆ ಮಾಡಿದಾಗ ಹೊಟ್ಟೆ ಉರಿಯುತ್ತೆ. 75 ವರ್ಷವಾದರೂ ಮನೆ ನೀಡಲಾಗಿಲ್ಲವಲ್ಲ ಎಂಬ ಸಂಕಟವಾಗುತ್ತದೆ ಎಂದರು.
ಅಧಿವೇಶನ ಮುಗಿದ ಮೇಲೆ ಸಭೆ ನಡೆಸಿ, ಎಲ್ಲೆಲ್ಲಿ ಜಾಗ ಇದೆ ಗುರುತಿಸಿ ನಿವೇಶನ, ಮನೆ ನೀಡಲು ಕ್ರಮ ಕೈಗೊಳಲಾಗುತ್ತದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಆಯಾ ಇಲಾಖೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಎಲ್ಲಾ ಇಲಾಖೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಗೊಂದಲಗಳನ್ನು ಬಗೆ ಹರಿಸಿ ಸಾಧ್ಯ ಮತ್ತು ಅರ್ಹರಿಗೆ ಮನೆ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಯಲಿದೆ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ನ ಸದಸ್ಯರು ಉಪಪ್ರಶ್ನೆ ಕೇಳಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.ಇದು ಪ್ರಶ್ನೋತ್ತರ ಹೆಚ್ಚಿನ ಚರ್ಚೆಗೆ ಅವಕಾಶ ಇಲ್ಲ. ಸಚಿವರೊಂದಿಗೆ ಸಮಯ ನಿಗದಿ ಮಾಡಿಕೊಂಡು ಸಭೆ ನಡೆಸಿ ತೊಂದರೆಗಳನ್ನು ಬಗೆ ಹರಿಸಿಕೊಳ್ಳಿ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಸಲಹೆ ನೀಡಿದರು.
ಮುಂದುವರೆದು ಉತ್ತರ ನೀಡಿದ ಸಚಿವ ಸೋಮಣ್ಣ ಅವರು, ಹಿಂದೆ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಎಷ್ಟು ಮನೆಗಳನ್ನು ನೀಡಿದೆ. ನಮ್ಮ ಸರ್ಕಾರದಲ್ಲಿ ಎಷ್ಟು ಮನೆಗಳನ್ನು ನೀಡಲಾಗಿದೆ ಎಂಬೆಲ್ಲಾ ಮಾಹಿತಿಗಳು ನಮ್ಮ ಬಳಿ ಇವೆ. ವಿಧಾನಸಭೆಯಲ್ಲಿ ಸಮಗ್ರ ಉತ್ತರ ನೀಡುತ್ತೇನೆ ಎಂದು ಹೇಳಿದರು.